Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ನಾವು ಬದಲಾದಾಗ ಮಾತ್ರ ದೇಶ ಬದಲಾಗುತ್ತದೆ – ಡಾ. ಮುರಳೀಧರ್ ನಾೖಕ್‌

ಮಂಗಳೂರು ಆ. 15 : ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 77 ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಟ್ರಸ್ಟಿ ಡಾ. ಮುರಳೀಧರ್ ನಾೖಕ್‌ ಆಗಮಿಸಿದರು. ಪ್ರಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್‌ ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಮುರಳೀಧರ್ ನಾೖಕ್‌ ನಾವು ಬದಲಾಗದ ಹೊರತು ದೇಶ ಬದಲಾಗದು ಎಂದರು. ಮುಂದುವರಿದು ಅವರು ವಿದ್ಯಾರ್ಥಿಗಳಿಗೆ 14 ವಿಶೇಷ ಸಂದೇಶವನ್ನು ಘೋಷಣೆ ಮಾಡಿದರು. ನಾವು ಕಸವನ್ನು ರಸ್ತೆಗೆ ಎಸೆಯಬಾರದು, ನಾವು ರಸ್ತೆ ಹಾಗೂ ಗೋಡೆಗೆ ಉಗುಳಬಾರದು. ನಾವು ಗೋಡೆ ಮತ್ತು ನೋಟಿನ ಮೇಲೆ ಬರೆಯಬಾರದು. ನೀರು ಮತ್ತು ವಿದ್ಯುತ್ತನ್ನು ಮಿತವಾಗಿ ಬಳಕೆ ಮಾಡಬೇಕು. ಗಿಡವನ್ನು ನೆಡಬೇಕು. ರಸ್ತೆ ನಿಯಮಾವಳಿಯನ್ನು ಪಾಲಿಸಬೇಕು. ಪ್ರತಿದಿನವು ತಂದೆ ತಾಯಿಯ ಆಶೀರ್ವಾದವನ್ನು ಪಡೆಯಬೇಕು.  ಮಹಿಳೆಯವರನ್ನು ಗೌರವಿಸಬೇಕು. ರಸ್ತೆಯಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಬಿಡಬೇಕು. ಸುಳ್ಳು ಮತ್ತು ಕಳ್ಳತನ ಮಾಡಬಾರದು. ನಾವು ಪ್ರಾಮಾಣಿಕರಾಗಬೇಕು. ನಾವು ಮಾದಕ ವ್ಯಸನದಿಂದ ದೂರವಿರಬೇಕು. ಈ ಮೂಲಕ ನಾವು ಬದಲಾದರೆ ದೇಶವು ಬದಲಾಗುತ್ತದೆ ಎಂದು ಹೇಳಿದರು.

5000 ವರ್ಷದ ಅಖಂಡ ಭಾರತದ ಇತಿಹಾಸವನ್ನು ಮಕ್ಕಳ ಮುಂದೆ ತೆರೆದಿಟ್ಟ ಇವರು ನಾವು 2500 ವರ್ಷಗಳ ಹಿಂದೆಯೇ ನಮ್ಮ ದೇಶದಲ್ಲಿ ಅನೇಕ ವಿಶ್ವವಿದ್ಯಾನಿಲಯ ಇದ್ದವು. ಇದರಲ್ಲಿ ಏಷ್ಯಾ ಖಂಡದ ಅನೇಕ ರಾಷ್ಟ್ರಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆದಿರುವುದು ಇತಿಹಾಸದಲ್ಲಿ ಕಾಣಲಿಕ್ಕೆ ಸಿಗುತ್ತದೆ. ನಮ್ಮ ದೇಶವನ್ನು ಅನೇಕ ಆಕ್ರಮಣಕಾರಿಗಳು ಆಕ್ರಮಣ ಮಾಡಿದರು. ನಾವು ನಮ್ಮ ಸಂಸ್ಕೃತಿಯನ್ನು ಎಂದೂ ಬಿಟ್ಟಿಲ್ಲ ಇದರ ಪರಿಣಾಮವಾಗಿ ಇಂದು ಭಾರತ ಮತ್ತೊಮ್ಮೆ ಜಗತ್ತಿಗೆ ಜಗದ್ಗುರುವಾಗುವತ್ತಾ ಸಾಗುತ್ತಿದೆ. ಇಂತಹ ಭಾರತವನ್ನು ನಾವು ಸದಾ ಗೌರವಿಸಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಭಾರತದ ಸ್ವಾತಂತ್ರ್ಯಕ್ಕೋಸ್ಕರ ಅನೇಕ ರಾಷ್ಟ್ರಭಕ್ತರು ಹೋರಾಟವನ್ನು ಮಾಡಿರುವ ಪರಿಣಾಮ ನಾವು ಇಂದು ಸ್ವಾತಂತ್ರ್ಯ ಪಡೆದು ಈ ದೇಶದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥಾಪಕರಾದ ಡಾ. ಕೆ.ಸಿ. ನಾೖಕ್‌ ಮಾತನಾಡಿ ಭಾರತ ಎಲ್ಲಾ ರಂಗದಲ್ಲಿಯೂ ಪ್ರಗತಿ ಸಾಧಿಸುತ್ತಿದೆ. ಈ ದೇಶವು ಮುಂದಿನ ದಿನಗಳಲ್ಲಿ ಆರ್ಥಿಕವಾಗಿಯೂ ಬಲಿಷ್ಠಗೊಳ್ಳುವುದನ್ನು ನೀವೆಲ್ಲರೂ ಆನಂದಿಸಬೇಕೆಂದು ಕರೆ ನೀಡಿದರು. ದೇಶದ ಪ್ರಗತಿಗೆ ನಾವೆಲ್ಲರೂ ನಮ್ಮ ಶಿಕ್ಷಣದ ನಂತರ ನಿರಂತರವಾಗಿ ಶ್ರಮ ವಹಿಸಬೇಕೆಂದು ಕಿವಿ ಮಾತು ಹೇಳಿದರು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಸಮಿತಿ ಸದಸ್ಯೆ ಸಗುಣ ಸಿ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ. ಉಪಸ್ಥಿತರಿದ್ದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶೀ ವೆಂಕಟೇಶ್ ಮೂರ್ತಿ ಸ್ವಾಗತಿಸಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ವಂದಿಸಿ, ಕನ್ನಡ ಅಧ್ಯಾಪಕರಾದ ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.