ಶಕ್ತಿ ಪದವಿ ಪೂರ್ವ ಕಾಲೇಜಿಗೆ ಜಗತ್ತಿನ 16 ನೇ ವಯಸ್ಸಿಗೆ ಕಿರಿಯ ಮುಖ್ಯೋಪಾಧ್ಯಾಯ ಪದವಿಯನ್ನು ಪಡೆದಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಶಿಕ್ಷಕರಾದ ಶ್ರೀ ಬಾಬರ್ ಅಲಿ ಅವರು ಭೇಟಿ ನೀಡಿದರು. ಇವರು ತಮ್ಮ 9 ನೇ ವಯಸ್ಸಿಗೆ ಬೋಧನೆಯನ್ನು ಪ್ರಾರಂಭಿಸಿದವರು. ಮುರ್ಷಿದಾಬಾದ್ ಜಿಲ್ಲೆಯು ಅತ್ಯಂತ ಹಿಂದುಳಿದ ಪ್ರದೇಶವಾಗಿರುವುದರಿಂದ ಆ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡುವ ಕೆಲಸವನ್ನು ಬಾಬರ್ ಅಲಿ ಅವರು ನಡೆಸಿರುತ್ತಾರೆ.





ಇವರು ಇಂದು ಶಕ್ತಿ ಪದವಿ ಪೂರ್ವ ಕಾಲೇಜಿನ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ನನ್ನ ಉದ್ದೇಶ ಆ ಪ್ರದೇಶದ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವುದಾಗಿದೆ. ನನಗೆ ಪ್ರೇರಣೆ ಪಶ್ಚಿಮ ಬಂಗಾಳದ ನನ್ನ ಜಿಲ್ಲೆಯ ಹತ್ತಿರವಿದ್ದ ರಾಮಕೃಷ್ಣ ಮಿಷನ್ ಸಂಸ್ಥೆ. ನಾನು ಸ್ವಾಮಿ ವಿವೇಕಾನಂದರ ಪುಸ್ತಕವನ್ನು ನಿರಂತರವಾಗಿ ಓದುವುದರ ಮೂಲಕ ಸಾಮಾಜಿಕ ಬದಲಾವಣೆಯನ್ನು ಮಾಡಬೇಕೆಂದು ಪಣತೊಟ್ಟಿರುವುದರಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತು. 2006 ರಲ್ಲಿ ಸಿಎನ್ಎನ್ಐಬಿಎನ್ ಚಾನೆಲ್ ರಿಯಲ್ ಹೀರೋಸ್ ಕಾರ್ಯಕ್ರಮದ ಮೂಲಕ ಬಹುಮಾನವನ್ನು ನೀಡಿತು. ಎನ್ಡಿಟಿವಿ ಇಂಡಿಯನ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಿತು. ಇತ್ತೀಚೆಗೆ ಫೋರ್ಬ್ಸ್ ಏಷ್ಯಾವು ಸಾಮಾಜಿಕ ಉದ್ಯಮಿಯಾಗಿ 30 ವರ್ಷದೊಳಗಿನ 30 ಹೆಸರುವಾಸಿಯರ ಪಟ್ಟಿಯಲ್ಲಿ ಸೇರಿಸಿತು.
ನಾನು ಆನಂದ ಶಿಕ್ಷಾನಿಕೇತನ ಸಂಸ್ಥೆಯನ್ನು ಪ್ರಾರಂಭಿಸಿ ನನ್ನ ಊರಿನ ಸುಮಾರು 500 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತವಾದ ಶಿಕ್ಷಣವನ್ನು ನೀಡುತ್ತಾ ಬರುತ್ತಿದ್ದೇನೆ. ಈ ಎಲ್ಲಾ ಪ್ರಶಸ್ತಿಗಳು ಆ ವಿದ್ಯಾರ್ಥಿಗಳ ಸೇವೆಗೆ ಸಲ್ಲುತ್ತದೆ. ಜೀವನದಲ್ಲಿ ಸಾಮಾಜಿಕವಾದ ಸೇವೆಯನ್ನು ಮಾಡುವ ವಿಚಾರವನ್ನು ಸ್ವಾಮಿ ವಿವೇಕಾನಂದರ ವಿಚಾರದಿಂದ ಪಡೆದಿರುತ್ತೇನೆ. ಕೇಂದ್ರ ಸರ್ಕಾರದ ಸಿಬಿಎಸ್ಇ 10 ನೇ ತರಗತಿಯ ಇಂಗ್ಲೀಷ್ ಪಠ್ಯ ಪುಸ್ತಕ ಮತ್ತು ಕರ್ನಾಟಕ ಸರ್ಕಾರದ ಪ್ರಥಮ ಪಿಯುಸಿ ಇಂಗ್ಲಿಷ್ ಪಠ್ಯ ಪುಸ್ತಕದಲ್ಲಿ ಹಾಗೂ ಪ್ರಪಂಚದ ಇತರ ಪಠ್ಯ ಪುಸ್ತಕದಲ್ಲಿ ನನ್ನ ಸಾಧನೆಯನ್ನು ಗುರುತಿಸಿ ಈ ಹಿಂದಿನ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ತಮ್ಮ ಭಾಷಣಧಲ್ಲಿ ನನ್ನ ಕೆಲಸದ ಬಗ್ಗೆ ಉಲ್ಲೇಖಿಸಿರುತ್ತಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದವನ್ನು ನಡೆಸಲಾಯಿತು.
ಸಂಸ್ಥೆಯ ಪ್ರಾಧಾನ ಸಲಹೆಗಾರರಾದ ರಮೇಶ್ ಕೆ. ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್, ಇವರು ಶಾಲು ಹೊದಿಸಿ ಸಂಸ್ಥೆಯ ಪರವಾಗಿ ಗೌರವಿಸಿದರು. ವಾಣಿಜ್ಯ ವಿಭಾಗದ ಮೆಲಿಸ್ಸಾ ಸ್ವಾಗತವನ್ನು ಮಾಡಿದರು. ಉಪನ್ಯಾಸಕಿ ಅಕ್ಷತ ಮತ್ತು ಶಕುಂತಲ ಉಪಸ್ಥಿತರಿದ್ದರು.