Call Us :
+91 96860 00046
Admission Open
+91 9108043552 info@shakthi.edu.in Follow us on Facebook Youtube Login

ಶಕ್ತಿನಗರದ ವಿದ್ಯಾರ್ಥಿಗಳು ಸಾಧನೆ ಮಾಡಲು ಗುರುಗಳಿಂದ ಮಾರ್ಗದರ್ಶನ ಪಡೆಯಬೇಕು – ದೇವದಾಸ್ ಕಾಪಿಕಾಡ್

ಮಂಗಳೂರು ನಂ. ೧ : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಮಂಗಳೂರಿನ ಹೆಸರಾಂತ ತುಳು ರಂಗಭೂಮಿ ಹಾಗೂ ಚಲನಚಿತ್ರ ನಟರಾದ ದೇವದಾಸ ಕಾಪಿಕಾಡ್ ರವರು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಇತಿಹಾಸ, ಪರಂಪರೆ ಅವಿಸ್ಮರಣೀಯವಾದುದು. ಕವಿಗಳು, ಸಂತರು ಜನಿಸಿದ ಪುಣ್ಯ ಭೂಮಿ ಕರ್ನಾಟಕ, ರಂಗಭೂಮಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ನಾನು ನಿರಂತರವಾದ ರಂಗಭೂಮಿಯ ಸೇವೆ ಮಾಡುತ್ತೇನೆ. ಮುಂದಿನ ಜನ್ಮದಲ್ಲಿಯು ಕಲಾವಿದನಾಗಿ ಜನಿಸುತ್ತೇನೆ. ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಲ್ಲಿ ರಂಗಭೂಮಿಯ ಕಡೆಗೆ ಆಸಕ್ತಿಯನ್ನು ತೋರಿಸಬೇಕು. ಇದು ಮುಂದಿನ ಜೀವನದಲ್ಲಿ ಸರ್ವಶ್ರೇಷ್ಠ ಕಲಾವಿದನಾಗಿ ನಿರ್ಮಾಣ ಮಾಡುತ್ತದೆ. ನಾವು ಇಂತಹ ಸಾಧನೆ ಮಾಡಲು ಗುರುಗಳ ನಿರಂತರವಾದ ಮಾರ್ಗದರ್ಶನವನ್ನು ಪಡೆಯಬೇಕು. ಗುರುಗಳು ಇದ್ದಾಗ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾನು ಈ ಮಟ್ಟಕ್ಕೆ ಬೆಳೆಯಲು ಶಾಲೆ ಮತ್ತು ಕಾಲೇಜಿನ ವಾತಾವರಣವೇ ಕಾರಣ ಎಂದು ಹೇಳಿದರು. ನಾವು ಎಲ್ಲಾ ಚಟುವಟಿಕೆಯಲ್ಲಿಯೂ ಭಾಗವಹಿಸುವ ಗುಣವನ್ನು ಹೊಂದಬೇಕೆಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ಕಾಲೇಜಿನ ಪ್ರಾಂಶುಪಾಲರಾದ ಟಿ. ರಾಜರಾಮ್ ರಾವ್ ಮಾತನಾಡಿ ನಮ್ಮ ಮಾತೃ ಭಾಷೆಯ ವ್ಯವಹಾರ ಕನ್ನಡದಲ್ಲಿರಬೇಕು. ಇದರ ಜೊತೆಗೆ ಇತರ ಭಾಷೆಗಳಿಗೆ ಸಮಾನ ಗೌರವವನ್ನು ನೀಡಬೇಕು. ಕರ್ನಾಟಕದ ಇತಿಹಾಸ ತುಂಬಾ ದೊಡ್ಡದು ಇದರಲ್ಲಿ ಭಾಷೆ, ಸಂಸ್ಕೃತಿ ಹಾಗೂ ಸಂಸ್ಕಾರ ಅಡಗಿದೆ ಎಂದು ಹೇಳಿದರು. ನಾವು ನಮ್ಮ ಜೀವನದಲ್ಲಿ ಪ್ರಗತಿ ಸಾಧಿಸಲು ನಮ್ಮ ರಾಜ್ಯದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಬೇಕೆಂದರು.

ಶಕ್ತಿ ವಸತಿ ವಿದ್ಯಾರ್ಥಿ ಯಶವಂತ್ ಡಿ. ಕನ್ನಡ ರಾಜ್ಯೋತ್ಸವದ ಬಗ್ಗೆ ತನ್ನ ಅಭಿಪ್ರಾಯವನ್ನು ಭಾಷಣ ರೂಪದಲ್ಲಿ ವ್ಯಕ್ತಪಡಿಸಿದರು. ಕಾರ್ಯಕ್ರಮ ವೇದಿಕೆಯಲ್ಲಿ ಪ್ರಧಾನ ಸಲಹೆಗಾರರಾದ ರಮೇಶ ಕೆ. ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಜಿ. ಕಾಮತ್, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ನೃತ್ಯವನ್ನು ನಡೆಸಿಕೊಟ್ಟರು. ಸಂಸ್ಥೆಯ ಶಿಕ್ಷಕರು ನಾಡಗೀತೆಯನ್ನು ಹಾಡಿದರು. ಕನ್ನಡ ಅಧ್ಯಾಪಕರಾದ ಶರಣಪ್ಪ ಅತಿಥಿ ಪರಿಚಯ ಹಾಗೂ ಕನ್ನಡ ಅಧ್ಯಾಪಕಿ ರೇಖಾ ಡಿಕೋಸ್ಟ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಧನ್ಯವಾದವನ್ನು ವಿದ್ಯಾರ್ಥಿನಿ ಭೂಮಿಕ ನೆರವೇರಿಸಿ, ಕು. ಶುಕ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.