ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ಪ.ಪೂ. ಕಾಲೇಜಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ 2025-26 ನೇ ಶೈಕ್ಷಣಿಕ ವರ್ಷ ಆರಂಭದ ಪೂರ್ವಭಾವಿಯಾಗಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.





ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೖಕ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಅವರು ಮಾತನಾಡಿ ಶಕ್ತಿ ಪದವಿಪೂರ್ವ ಕಾಲೇಜು ಪ್ರಾರಂಭವಾಗಿ ಒಟ್ಟು 7 ವರ್ಷವನ್ನು ಪೂರೈಸಿದೆ. ಕಳೆದ 7 ವರ್ಷಗಳಲ್ಲಿ ನಮ್ಮ ಸಂಸ್ಥೆಯು ಉತ್ತಮವಾದಂತಹ ಫಲಿತಾಂಶವನ್ನು ನೀಡುತ್ತಾ ಬರುತ್ತಿದೆ. ಜೆಇಇನಲ್ಲಿ ಉತ್ತಮ ರ್ಯಾಂಕ್ ಗಳೊಂದಿಗೆ ಅಯ್ಕೆಯಾದ ವಿದ್ಯಾರ್ಥಿಗಳು ರಾಷ್ಟ್ರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದಾರೆ. ನೀಟ್ ಮತ್ತು ಕೆಸಿಇಟಿ ಪರೀಕ್ಷೆಯಲ್ಲಿಯೂ ಉತ್ತಮ ರ್ಯಾಂಕ್ ಗಳೊಂದಿಗೆ ಅಯ್ಕೆಯಾಗಿ ಸರ್ಕಾರಿ ಕೋಟಾದಲ್ಲಿ ಸೀಟನ್ನು ಪಡೆದು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿಭಾಗಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ರಾಜ್ಯ ಮಟ್ಟದ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುತ್ತಿರುವ ಪರೀಕ್ಷೆಗಳಲ್ಲಿ ರಾಜ್ಯ ಮಟ್ಟದ ರ್ಯಾಂಕ್ನೊಂದಿಗೆ ಅಯ್ಕೆಯಾಗುತ್ತಿರುವುದು ಅಭಿನಂದನೀಯವಾಗಿದೆ.
ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ರಾಹುಲ್ರವರು ಈ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗದ ತರಗತಿಗಳ ಬಗ್ಗೆ ವಿವರವಾಗಿ ಪೋಷಕರಿಗೆ ಮಾಹಿತಿ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಅಕ್ಷತಾರವರು ವಾಣಿಜ್ಯ ಕ್ಷೇತ್ರದ ವಿಫುಲ ಅವಕಾಶಗಳ ಬಗ್ಗೆ ತಿಳಿಸುವುದರ ಮೂಲಕ ಈ ಶೈಕ್ಷಣಿಕ ವರ್ಷದಲ್ಲಿ ನಡೆಯುವ ವಾಣಿಜ್ಯ ವಿಭಾಗದ ತರಗತಿಗಳ ಬಗ್ಗೆ ಮಾಹಿತಿ ನೀಡಿದರು. ಭಾಷಾವಾರು ವಿಷಯಗಳ ಕುರಿತಂತೆ ಕನ್ನಡ ಉಪನ್ಯಾಸಕರಾದ ಸುನಿಲ್ರವರು ಉಪಯುಕ್ತವಾದ ಮಾಹಿತಿ ನೀಡಿದರು.
ಗಣಕವಿಜ್ಞಾನ ವಿಭಾಗದ ಶಿಕ್ಷಕರಾದ ಸೂರ್ಯನಾರಾಯಣ ಭಟ್ ರವರು ಕಾಲೇಜಿನ ನಿಯಮಗಳು ಹಾಗೂ ವಸತಿ ನಿಲಯದ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಕೆ.ಸಿ. ನಾಕ್ರವರು ಶಕ್ತಿ ಪದವಿ ಪೂರ್ವ ಕಾಲೇಜು ಈ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಾಡಿರುವ ವಾರ್ಷಿಕ ಯೋಜನೆಯ ಪುಸ್ತಕದಲ್ಲಿರುವ ಅಂಶಗಳಿಗೆ ಒತ್ತು ಕೊಟ್ಟು ಕಾರ್ಯನಿರ್ವಹಿಸಲಿದೆ. ವರ್ಷದ ಪ್ರತಿ ತಿಂಗಳಿನ ಪ್ರತಿ ದಿನ ಯಾವ ಚಟುವಟಿಕೆಯನ್ನು ಹೇಗೆ ಮಾಡಬೇಕೆಂಬ ಮಾಹಿತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗೆ ಹಾಗೂ ಅವರ ಪೋಷಕರಿಗೆ ಕೊಟ್ಟಿರುತ್ತೇವೆ. ಇದನ್ನು ಪಾಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಮ್ಮಲ್ಲಿ ಸಾಕಷ್ಟು ವರ್ಷ ಅನುಭವವಿರುವ ನುರಿತ ಉಪನ್ಯಾಸಕರ ತಂಡವಿದೆ. ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಆಗಾಗ ಪರಿಶಿಲಿಸಲಿದ್ದಾರೆ. ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತದ ಸಂಪತ್ತಾಗಬೇಕು ಇದಕ್ಕೊಸ್ಕರ ಪಠ್ಯದ ಜೊತೆ ಸಂಸ್ಕಾರವನ್ನು ಕೊಡುವ ಕೆಲಸವನ್ನು ಶಕ್ತಿ ಪದವಿಪೂರ್ವ ಕಾಲೇಜು ನಿರಂತರವಾಗಿ ಮಾಡುತ್ತದೆ ಎಂದು ಹೇಳಿದರು.
2024-25 ನೇ ಸಾಲಿನ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ನೇ ರ್ಯಾಂಕ್ ಗಳಿಸಿದ ವಾಣಿಜ್ಯ ವಿಭಾಗದ ರಿಚಾ ಗಣೇಶ್ ದಲ್ವಿ, ೮ನೇ ರ್ಯಾಂಕ್ ಗಳಿಸಿದ ನೈದಿಲೆ, ವಿಜ್ಞಾನ ವಿಭಾಗದ 9 ನೇ ರ್ಯಾಂಕ್ ಗಳಿಸಿದ ಸ್ಟೀವ್ ಜೆಫ್ ಲೋಬೊ, ೧೦ನೇ ರ್ಯಾಂಕ್ ಗಳಿಸಿದ ಅಶ್ವತ್ ಅಜಿತ್ ಪೈ ಅದರ ಜೊತೆಗೆ ಜೆಇಇ ಬಿ.ಆರ್ಕ್ ಪರೀಕ್ಷೆಯಲ್ಲಿ 2316 ರ್ಯಾಂಕ್ ಅಭಿನ್ ಕೃಷ್ಣ, ಕೆಸಿಇಟಿ ಯಲ್ಲಿ 236 ನೇ ರ್ಯಾಂಕ್ ಗಳಿಸಿದ ಅನುರಾಗ್ ಆರ್. ನಾೖಕ್ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ವೆಂಕಟೇಶ ಮೂರ್ತಿರವರು ಸ್ವಾಗತಿಸಿ, ಶಿಕ್ಷಕ ಸುನಿಲ್ ಕಾರ್ಯಕ್ರಮ ನಿರೂಪಿಸಿದರೆ, ಆಂಗ್ಲ ಶಿಕ್ಷಕಿ ಅಶ್ವಿನಿಯವರು ವಂದಿಸಿದರು.